ಶ್ರೀನಿವಾಸ ವೈದ್ಯ
ಶ್ರೀನಿವಾಸ ವೈದ್ಯ ಕನ್ನಡ ಭಾಷೆಯ ಖ್ಯಾತ ಸಾಹಿತಿಗಳು. ಇವರು ಏಪ್ರಿಲ್ ೪,೧೯೩೬ರಂದು,ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜನಿಸಿದರು. ತಂದೆ ಶ್ರೀ ಬಿ.ಜಿ. ವೈದ್ಯ ಮತ್ತು ತಾಯಿ ಶ್ರೀಮತಿ ಸುಂದರಾಬಾಯಿ ಬಂಡೇರಾವ ವೈದ್ಯ.
ಶಿಕ್ಷಣ, ವೃತ್ತಿ ಜೀವನ
[ಬದಲಾಯಿಸಿ]೧೯೪೨ರಿಂದ ೧೯೪೬ರವರೆಗೆ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಧಾರವಾಡದ ಮುನಸಿಪಲ್ ೨ನೇ ನಂಬರ ಶಾಲೆಯಲ್ಲಿ ಮಾಡಿದ ಶ್ರೀನಿವಾಸ ವೈದ್ಯರು, ತಮ್ಮ ಮಾಧ್ಯಮಿಕ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಧಾರವಾಡದ ಕರ್ನಾಟಕ ಹೈಸ್ಕೂಲು ಮತ್ತು ಕರ್ನಾಟಕ ಕಾಲೇಜುಗಳಲ್ಲಿ (ಪದವಿ ಶಿಕ್ಷಣದಲ್ಲಿ ಅರ್ಥಶಾಸ್ತ್ರ ಮತ್ತು ಇತಿಹಾಸ ಪ್ರಧಾನ ವಿಷಯಗಳು) ಪೂರೈಸಿದ್ದಾರೆ. ೧೯೫೯ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡು, ಅದೇ ವರ್ಷ ಮುಂಬಯಿನ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದರು. ಜೂನ್ ೨, ೧೯೭೧ರಂದು, ಬಿ.ಎ ಪದವಿಧರೆ ಸುಹಾಸಿನಿಯವರ ಕೈಹಿಡಿದು ನಡೆಸಿದ ಬಾಳನೌಕೆಯಲ್ಲಿ ಇವರ ಏಕಮಾತ್ರ ಸುಪುತ್ರ ಶ್ರೀ ವಿನಾಯಕರ ಜನನ. ಮುಂದೆ ಮುಂಬಯಿ, ಬೆಳಗಾವಿ, ಧಾರವಾಡ, ಗೋವಾ, ಚನ್ನೈ ಬೆಂಗಳೂರುಗಳಲ್ಲಿ ಇವರದು ಅಖಂಡ ಸೇವೆ. ೧೯೯೬ರಲ್ಲಿ ನಿವೃತ್ತಿ ಹೊಂದಿದ ಶ್ರೀನಿವಾಸ ವೈದ್ಯರು ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.
ಕೃತಿಗಳು
[ಬದಲಾಯಿಸಿ]ಶ್ರೀನಿವಾಸ ವೈದ್ಯರು ಕನ್ನಡದ ಅಪರಂಜಿ ಹಾಸ್ಯ ಪತ್ರಿಕೆಯ ಬರಹಗಾರರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ ಇವರು , ಅಲ್ಲಿ ಸಂವಾದ ಎನ್ನುವ ಸಾಂಸ್ಕೃತಿಕ ಸಂಘಟನೆಯನ್ನು ಸ್ಥಾಪಿಸಿ ನಡೆಯಿಸಿಕೊಂಡು ಬಂದಿದ್ದಾರೆ.ಕನ್ನಡ ನಾಡಿನ ಖ್ಯಾತ ಬರಹಗಾರರಿಂದ ಭಾಷಣ, ಸಂವಾದ, ವಾಚನ ಮತ್ತು ಇತರ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.
ಇವರ ಕೆಲವು ಕೃತಿಗಳು ಇಂತಿವೆ:
- ತಲೆಗೊಂದು ತರತರ (ಲಲಿತ ಪ್ರಬಂಧಗಳು) ೧೯೯೪ - ಮೊದಲೆರೆಡು ಆವೃತ್ತಿಗಳ ಪ್ರಕಾಶಕರು, ಸುವಿದ್ಯಾ ಪ್ರಕಾಶನ ಬೆಂಗಳೂರು. ಮೂರನೇಯ ಆವೃತ್ತಿ ‘ಅಂಕಿತ ಪುಸ್ತಕ’ ಬೆಂಗಳೂರು.
- ಮನಸುಖರಾಯನ ಮನಸು ( ಲಲಿತ ಪ್ರಬಂಧಗಳು) ೧೯೯೭ - ಮನೋಹರ ಗ್ರಂಥಮಾಲಾ ಧಾರವಾಡ. ಸಧ್ಯದವರೆಗೆ ನಾಲ್ಕು ಆವೃತ್ತಿಗಳು.
- ರುಚಿಗೆ ಹುಳಿಯೊಗರು (ಲಲಿತ ಪ್ರಬಂಧಗಳು) ೨೦೦೩ - ಅಂಕಿತ ಪುಸ್ತಕ, ಬೆಂಗಳೂರು. ಸಧ್ಯದವರೆಗೆ ಎರಡು ಆವೃತ್ತಿಗಳು.
- ಹಳ್ಳ ಬಂತು ಹಳ್ಳ (ಕಾದಂಬರಿ) ೨೦೦೪ - ಮನೋಹರ ಗ್ರಂಥಮಾಲಾ, ಧಾರವಾಡ. ಐದನೇಯ ಆವೃತ್ತಿ ಸಿದ್ಧಗೊಳ್ಳುತ್ತಿದೆ.
- ಅಗ್ನಿಕಾರ್ಯ (ಸಣ್ಣ ಕತೆಗಳು) ೨೦೦೭ - ಅಂಕಿತ ಪುಸ್ತಕ ಬೆಂಗಳೂರು.
- ಮೊದಲ ಓದು (ಆಯ್ದ ಕತೆಗಳು) ೨೦೦೯ - ಅಕ್ಷರ ಪ್ರಕಾಶನ ಹೆಗ್ಗೋಡು, ಸಾಗರ.
- ಕಪ್ಪೆ ನುಂಗಿದ ಹುಡುಗ (ಕತೆಗಳು) ೨೦೧೨ - ಅಂಕಿತ ಪುಸ್ತಕ, ಬೆಂಗಳೂರು.
- ಕರ್ನಲ್ನಿಗೆ ಯಾರೂ ಬರೆಯುವುದೇ ಇಲ್ಲ (ಮಾರ್ಕ್ವೇಝ್ನ ’No one writes to the Colonel' ಕಾದಂಬರಿಯ ಅನುವಾದ) ೨೦೧೩ - ಮನೋಹರ ಗ್ರಂಥಮಾಲಾ, ಧಾರವಾಡ.
ನಾಟಕಕ್ಕೆ ರೂಪಾಂತರಗೊಂಡ ಕತೆಗಳು
[ಬದಲಾಯಿಸಿ]- ಶ್ರದ್ಧಾ ---> ನಾಟಕಕ್ಕೆ ರೂಪಾಂತರಗೊಳಿಸಿ ಪ್ರಯೋಗಿಸಿದ ತಂಡಗಳು - ನೀನಾಸಂ ಜನಮನದಾಟ- ಹೆಗ್ಗೋಡು, ರಂಗನಿರಂತರ- ಬೆಂಗಳೂರು,
- ಬದುಕಲು ಕಲಿಯಿರಿ ---> ನಾಟಕಕ್ಕೆ ರೂಪಾಂತರಗೊಳಿಸಿ ಪ್ರಯೋಗಿಸಿದ ತಂಡ - ರಂಗಾಯಣ ಮೈಸೂರು.
- ತ್ರಯಸ್ಥ ---> ನಾಟಕಕ್ಕೆ ರೂಪಾಂತರಗೊಳಿಸಿ ಪ್ರಯೋಗಿಸಿದ ತಂಡ - ಭಂಡಾರಕರ ಕಾಲೇಜು ಕುಂದಾಪುರ.
- ಬಿದ್ದೂರಿನ ಬಿಗ್ಬೆನ್ ---> ವಿವಿಧ ತಂಡಗಳು ಬೇರೆ ಬೇರೆ ಕಡೆಯಲ್ಲಿ ಈ ಕತೆಯನ್ನು ನಾಟಕಕ್ಕೆ ರೂಪಾಂತರಿಸಿ ಪ್ರಯೋಗಿಸಿವೆ.
- ದತ್ತೋಪಂತನ ಪತ್ತೇದಾರಿ ---> ನಾಟಕಕ್ಕೆ ರೂಪಾಂತರಗೊಳಿಸಿ ಪ್ರಯೋಗಿಸಿದ ತಂಡ - ಯುಕೋ ಬ್ಯಾಂಕ್ ಕನ್ನಡ ಸಂಘ, ಬೆಂಗಳೂರು.
- ಮನಸುಖರಾಯನ ಮನಸು ---> ೨೦೧೧ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಖಿಲ ಭಾರತ ಯುವಜನೋತ್ಸವದಲ್ಲಿ, ಧಾರವಾಡದ ತಂಡವೊಂದು ಇದನ್ನು ರಂಗರೂಪಕ್ಕಿಳಿಸಿ ಪ್ರಯೋಗಿಸಿದೆ.
- ಪಾರ್ಶ್ವಸಂಗೀತ -- > 2018ರಲ್ಲಿ ಯುವ ಸಾಹಿತಿ ಬಿ.ಪಿ. ಅರುಣ್ ರಂಗರೂಪಕ್ಕಿಳಿಸಿದ ಕತೆಯನ್ನು ಮೈಸೂರಿನ ರಂಗವಲ್ಲಿ ತಂಡವು ಪ್ರದರ್ಶಿಸಿದ್ದು, ಮೈಸೂರು, ಬೆಂಗಳೂರು, ಶಿವಮೊಗ್ಗ, ಧಾರವಾಡ ಸೇರಿದಂತೆ ಇದುವರೆಗೆ ಸುಮಾರು 40 ಯಶಸ್ವೀ ಪ್ರದರ್ಶನಗಳನ್ನು ನೀಡಿದೆ.
ಪ್ರಶಸ್ತಿಗಳು
[ಬದಲಾಯಿಸಿ]- ಹಳ್ಳ ಬಂತು ಹಳ್ಳ ಕಾದಂಬರಿಗೆ, ೨೦೦೪ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ೨೦೦೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.
- ಮನಸುಖರಾಯನ ಮನಸು ಕೃತಿಗೆ, ೨೦೦೩ ರಲ್ಲಿ ’ಪರಮಾನಂದ ಪ್ರಶಸ್ತಿ’.
- ೨೦೧೦ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.